ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, July 28, 2011

All seasons in YOU


There is winter….
You are angel in white
Sensing pure snow
Such a truthful blow
All is clear as YOU!

Here comes spring….
YOU beauty in colors
Surprised by collections
Envy your designer
Looking most for big day!

YOU spread in hot summer
Reminds me your temper
How bright YOU are!
Will wait for the evening
I know you get cooler

Knew YOU accept autumn
Beauty not always color
Neither losing is not lost!
YOU look so serious
All you do for new birth

Winter reminds your purity
Summer does for variety
Spring brings the beauty
Autumn does for serenity

Every moment hugs true
I see all seasons in YOU!

Dr. D 

Sunday, January 2, 2011

ಹೊರಗೊಂದಿರೆ ಒಳಗೊಂದು.......?




















ಬಾಂದಳದ ತುಂಬೆಲ್ಲಾ
ಕರಿಮೋಡ, ಚಂದ್ರನಿಲ್ಲದ ಆಕಾಶ
ಪಾರಿವಾಳದ ಹುಡುಕಾಟ
ಸಿಗುತ್ತಿಲ್ಲ?
ಗರುಡ ಗುಮ್ಮಗಳ ಆರ್ಭಟ!
ನಲ್ನುಡಿಗಳಿಗೆ ಬರ
ಸಿದ್ಧತೆಗಳ ಮಹಾಪೂರ
ಹಗಲಿಗರ್ಥ ಹುಡುಕುವ ತವಕದಿ
ರಾತ್ರಿಗೆಲ್ಲಾ ವ್ಯವಹಾರ
ಯಾರೋ ಮನದಲ್ಲಿ ಬಿತ್ತಿದ್ದ
ಶಾಶ್ವತ ಸ್ತಂಭ!
ಒಳಗೆಲ್ಲೋ ಹೊಸದೊಂದು
ಉದಯಕ್ಕೆ ಮ್ಲಾನ ಯತ್ನ
ಗುರಿಯಾಯ್ತು ವ್ಯಕ್ತಿ, ಶಕ್ತಿ
ನಿರ್ಜೀವ ಜೀವ ಕಳೆ
ಒಂದಿನಿತು ಅರಿವಿಲ್ಲ
ಎಷ್ಟು ಮುಗ್ದ ಈ ಇಳೆ?!

ಶಹಬಾಷ್, ನಿನ್ನ ಆತ್ಮಶಕ್ತಿಗೆ!
ಮೆಚ್ಚಿದೆ ನಿನ್ನ ಸುಪ್ತ ಸ್ಥೈರ್ಯಕೆ!
ಕೈ ತಟ್ಟುವೆ ನಿನ್ನ ಪ್ರಯತ್ನ ಬಲಕೆ!
ಬೆನ್ನುಜ್ಜುವೆ ನಿನ್ನ ಪೂರ್ವ ತಯಾರಿಗೆ!
ಆದರೆ?!

ಹೊಸರೂಪ ಕೊಡಮಾಡು
ಹೊಸ ದಿಶೆಯ ಗುರಿಮಾಡು
ನಿನ್ನ ಆದರ್ಶದ ಚೌಕಟ್ಟು ಬದಲಿಸು
ಸಾವಿರ ಕೈ ಮುಗಿದಿವೆ ನೋಡು

ತಯಾರಿ ನೇರ, ಉದ್ದೇಶ ಘೋರ
ಸಷ್ಟಿ ಹಗೆಗೆ ಸಮಷ್ಟಿ ಗುರಿಯೆ?
ನೋಡೊಮ್ಮೆ ಓ ಶಕ್ತಿ, ವ್ಯಕ್ತಿ?
ಸಾವಿರ ಕಂಬನಿ ಧರೆಗುದುರಿದೆ ಇಲ್ಲಿ...

ಬದುಕು ಬಯಸಿದಂತಿರದು
ಎಲ್ಲ ಬಯಕೆಯ ಬದುಕು ಒಪ್ಪದು
ಗುರಿ ಕದಲಿಸಿ ಕದ ತೆರೆ
ಇನ್ನೇನೋ ಹೊಸತಿದೆ ಹೆಕ್ಕಿ ನೋಡು?!..

ನಿಮ್ಮ
ದಿನು

(ಜನವಾಹಿನಿ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಕವನ......)

ಚಿತ್ರ ಮೂಲ: ಅಂತರ್ಜಾಲ

Friday, July 2, 2010

ಬದುಕೊಂದು ವ್ಯವಕಲನ!!!!!!!!!!




ಬದುಕಿನ ಯಾವುದೋ ಒಂದು ಅಸ್ಥಿರ ಹೆಜ್ಜೆಯಲ್ಲಿ ನಿಂತು, ಹಿಂದಿನ ಹೆಜ್ಜೆಯ ಪರಿಪೂರ್ಣತೆಗಾಗಿ ತವಕಿಸುವ ಪ್ರತಿಯೊಬ್ಬರಲ್ಲೂ ಯಾವುದೋ ಒಂದು ಅವ್ಯಕ್ತ ಅಂಶವನ್ನು ಕಳೆದುಕೊಂಡಿದ್ದೇವೆ ಎಂಬ ಭಯ. ಸತ್ಯದಲ್ಲಿಯೂ ಅಸತ್ಯದ ಅಸಹಾಯಕತೆ!. ಬಾಲ್ಯದಲ್ಲಿದ್ದ ಕುತೂಹಲ, ರಗೋರಿ ಆಟದ ನೆನಪು, ದುಂಬಿಯ ಬಾಲಕ್ಕೆ ನೂಲು ಕಟ್ಟಿ ಅದರ ಚಟುವಟಿಕೆ ನೋಡಿ ಹಿಂಸೆ ಕೊಡುತ್ತಿದ್ದೇನೆ ಅಂದುಕೊಂಡರೂ ನಲಿದಾಡುತ್ತಿದ್ದ ವಿಕ್ಷಿಪ್ತ ಮನ:ಸ್ಥಿತಿ, ಎಲ್ಲವೂ ಎಷ್ಟೋ ದೂರ ಸರಿದಿರುತ್ತದೆ. ಕೆಲವೊಮ್ಮೆ ಹುಡುಕಿದರೂ ಕೇವಲ ಕಲ್ಪನೆಗೆ ನಿಲುಕುವಷ್ಟು.....!. ಮಕ್ಕಳಿದ್ದಾಗ ನಾವೆಲ್ಲ ವಿಶ್ವಮಾನವರು. ದೊಡ್ಡವರಾದಂತೆ ವಿಶ್ವ ಮಾತ್ರ ನಮ್ಮದು!. ಚಿಕ್ಕಂದಿನಲ್ಲಿ ಯಾವ ವಿಷಯ ಮನಸಿಗೆ ಬಂದರೂ ಅದರ ಕುರಿತಾಗಿ ಯೋಚಿಸುವ ತವಕ. ಕಣ್ಣಿಗೆ ಕಂಡದ್ದನ್ನು ನೋಡಿ ವಿಶ್ಲೇಷಿಸುವ, ಇಲ್ಲದಿದ್ದ ಪಕ್ಷದಲ್ಲಿ ನೋಡಿ ಖುಷಿ ಪಡುತ್ತಿದ್ದ ದಿನಗಳು. ಆದರೆ ಜೀವನದ ಪ್ರತಿ ಹೆಜ್ಜೆ ಚಲನೆ ಕಂಡಾಗಲೂ ನಮ್ಮ ಬದುಕು constrained ಅನ್ನಿಸಿಬಿಡುತ್ತೆ. ಬೆಳಿಗ್ಗೆ ಹೊರಟರೆ ಸಾಯಂಕಾಲ ಮನೆಗೆ, ಎದ್ದ ತಕ್ಷಣ ಪ್ಯಾಂಟು, ಶರ್ಟ್, ಸೀರೆ, ಕುಪ್ಪಸ, ಚೂಡಿದಾರ, ಬೂಟಿಗೆ ಪಾಲಿಶ್....ಇದೇ ವ್ಯವಹಾರಿಕ ಯೋಚನೆಗಳು. ಮಗು ಹತ್ತಿರ ಬಂದರೆ, ಶಾಲೆಗೆ ಹೋಗಿ ಬಾ ಪುಟ್ಟ, ಸಂಜೆ ಆಡೋಣ ಎಂಬ ಆಶ್ವಾಸನೆ. ಮಗು ಹುಟ್ಟಿದ ದಿನದಿಂದಲೂ ಈ ಆಶ್ವಾಸನೆ ಇದ್ದದ್ದೆ!!. ಚಿಕ್ಕವರಿದ್ದಾಗ ಅಗಸ್ಟ್ ೧೫ರ ಧ್ವಜಾರೋಹಣ, ನವಂಬರ್ ೧೪ರ ಮಕ್ಕಳ ದಿನಾಚರಣಿ....ಹೀಗೆ ಎಲ್ಲವೂ ಖುಷಿ ಕೊಡುತ್ತಿತ್ತು. ದೊಡ್ಡವರಾದ ಮೇಲೆ ಈ ಬಗ್ಗೆ ಯೋಚಿಸುವಷ್ಟು ಸಹ ಕುತೂಹಲ, ಆಸಕ್ತಿ, ಪುರುಸೊತ್ತು ಯಾವುದೂ ಇಲ್ಲದಂತ ಪರಿಸ್ಥಿತಿ. ನಾವೇನನ್ನೋ ಮೀರಿ ಬಂದಿದ್ದೇವೆಂಬ ಭಾವ. ಒಂತರಾ ಪೂರ್ಣತೆಯಿಂದ ಅಪೂರ್ಣತೆಯತ್ತ ಪಯಣ..!. ಬದುಕಿನಲ್ಲಿ ಒಮ್ಮೆ ವ್ರದ್ದಾಪ್ಯ ಸಮೀಪಿಸಿದರೆ ಕಳೆದು ಬಂದ ದಿನಗಳಲ್ಲಿ, ಕಳೆದು ಕೊಂಡ ಎಷ್ಟೋ ಅಂಶಗಳು ನೆನಪಾಗುತ್ತೆ. ನದಿಯ ತೀರದಲ್ಲಿ ಕುಳಿತು ನದಿಯ ನೀರಿನ ಅಳತೆ ಮಾಡಿದಂತೆ, ಕೈಗೆ ಸಿಗದ, ಮನಕ್ಕೆ ನಿಲುಕದ ಸಾವಿರ ಯೋಚನೆಗಳು. ಹಿಂದೆ ತಾನು ಓಡಾಡಿದ ಮಾರ್ಗದ ದೂಳನ್ನು ಸಹ ಕೆಣಕದಷ್ಟು ದೌರ್ಬಲ್ಯ. ತನ್ನದೇ ಸ್ರಷ್ಟಿ ಮುನಿದರೆ ವಿಷ್ಯ ಮತ್ತಷ್ಟು ತೀವ್ರವಾಗುತ್ತೆ.

ಹೀಗೆ ಮಕ್ಕಳಿದ್ದಾಗ ಪ್ರಕ್ರತಿಯನ್ನು, ದೈನಂದಿನ ಬದಲಾವಣಿಗಳನ್ನು ಆಸ್ವಾದಿಸುತ್ತಿದ್ದ ವ್ಯವದಾನ, ದಿನ ಕಳೆದಂತೆ quite common ಅನ್ನಿಸಿಬಿಡುತ್ತೆ. ಆದರೆ ಬದುಕಿನ ಬದಲಾವಣಿಗಳ ಎಷ್ಟೋ ಅಂಶಗಳು ಹಳತು ಎನ್ನಿಸುತ್ತವೆಯಾದರೂ ಕೊನೆಗೆ ರುಚಿಯಾಗುವಂತದ್ದು ಪ್ರೀತಿ, ವಿಶ್ವಾಸ ಮಾತ್ರ. ಇದು ಹಣ್ಣಿಗಿಟ್ಟ ಹಲಸಿನ ಕಾಯಿಯ ಹಾಗೆ, ಹಣ್ಣಾಗ ಹೊರಟ ಹುಣಸೆ ಹುಳಿಯ ಹಾಗೆ. ಇದು ಎಷ್ಟು ರುಚಿಯಾಗಿರುತ್ತೆ ಅಂದರೆ, ಕೊನೆ ಗಳಿಗೆಯಲ್ಲಿ ಎಳೆದು ಧಮ್ ತೆಗೆದುಕೊಳ್ಳುವ ಮುಂಡು ಬೀಡಿಯ ಹಾಗೆ!. ಚಿಕ್ಕವರಿದ್ದಾಗ ಎಲ್ಲರೊಂದಿಗೆ ಬೆರೆತು, ಪಾಪು-ಪುಟ್ಟ ಅನ್ನಿಸಿಕೊಳ್ಳುತ್ತ, ಅಪ್ಪ, ಅಮ್ಮ, ಅಣ್ಣ, ಮಾವ, ತಂಗಿ, ಅಕ್ಕ, ಅಜ್ಜ, ಅಜ್ಜಿ ಎಲ್ಲರೊಂದಿಗೆ ಬೆರೆಯುವ ಅವಕಾಶವಿರುತ್ತೆ. ದಿನ ಕಳೆದಂತೆ ಎಲ್ಲವೂ ಸೀಮಿತ ಅರ್ಥ ಕಂಡುಕೊಳ್ಳುತ್ತೆ. ಯಾವಾಗಲೋ ಸಮಯ ಸಿಕ್ಕಾಗ ಮನೆ, ಮನೆಯವರೊಡನೆ ಸಂಭಾಷಣಿ. ಇಲ್ಲದಿದ್ದಲ್ಲಿ ಎಲ್ಲರೂ ಸೇರುವ ಸಂದರ್ಭ ಶುಭ ಸಮಾರಂಭದಲ್ಲಿ ಮಾತ್ರ. ಹೀಗೆ ದಿನಗಳುರುಳಿದಂತೆ ಬದುಕಿನ ವ್ಯವಕಲನ ತೀವ್ರವಾಗುತ್ತೆ. ಕಳೆದುಕೊಂಡ ಅಂಕೆಗಳು ಲೆಕ್ಕಕ್ಕೆ ಸಿಗದಷ್ಟು ದೂರ ಹೋಗಿರುತ್ತೆ. ನಮ್ಮವರು ಎಂದು ಕೊಂಡವರೆಲ್ಲಾ ಟೆಲಿಪೋನ್ ಮಿತ್ರರಾಗುತ್ತಾ ಹೋದಂತೆ, ಭಾವನಾತ್ಮಕ ಸಂಬಂದದ ತೀವ್ರತೆ ಕಮ್ಮಿಯಾಗುತ್ತೆ. ಆದರಿದುಅನಿವಾರ್ಯ. ಅವಸರದ ಓಟದ ಬದುಕಿನಲ್ಲಿ ತಂದೆ, ತಾಯಿಯವರ ಅನಾರೋಗ್ಯಕ್ಕೂ ಸ್ಪಂದಿಸದಷ್ಟು ಕೆಲಸ. ಬದುಕು ದಿನ ಕಳೆದಂತೆ ಸಂಘರ್ಷ ಪೋಣಿತವಾಗುತ್ತೆ. ಆಗ ಬದುಕಿನ ಭಾವನಾತ್ಮಕ ಮುಖಕ್ಕಿಂತ ಕಾರ್ಯೋನ್ಮುಖ ಮುಖ ಮುಖ್ಯವಾಗುತ್ತೆ. ಆದರೊಂದು ಮಾತು.......ಬದುಕು ಯಾವ ಸ್ಥರದತ್ತ ಓಡಿದರೂ ಅದು ಬದುಕಿನ ದಿನಗಳ ಉಳಿವಿಕೆಗಾಗಿ. ಅದು ಉಳಿಯಬೇಕೆಂದರೆ ಪರಿಸರದ ಬದಲಾವಣಿಗಳ ಜೊತೆ ಭಾವನಾತ್ಮಕ ಸ್ಪಂದನವಿರಬೇಕಾದದ್ದು ಅನಿವಾರ್ಯ. ಅದಿಲ್ಲದಿದ್ದರೆ ವ್ಯವಕಲನ ಬದುಕಿನ ಅರ್ಥವನ್ನೇ ಕಳೆಯುವುದರಲ್ಲಿ ಸಂಶಯವಿಲ್ಲ, ಅಲ್ವಾ?.......

ದಿನು
Note: Image from Internet

Saturday, April 3, 2010

ದೂರವಾಣಿಯ ದೂರದ ರಿಂಗಣದೊಂದಿಗೆ.........


ಆ ಒಂದು ಗಳಿಗೆ ಯಾವಾಗಲೋ ಹೇಳಬೇಕೆನಿಸಿದ್ದನ್ನು ಹೇಳಲು ಅವಕಾಶ ಮಾಡಿಕೊಡುತ್ತೆ. ಎಷ್ಟೋ ಬಾರಿ ದೂರದವರನ್ನು ಹತ್ತಿರವಾಗಿಸುತ್ತೆ. ಸಂಬಂಧಗಳನ್ನು ಸಂಧಿಸಿ ಬಿಡುತ್ತೆ. ಅದರ ಕೂಗಾಟ ದೂರದ ದ್ವನಿ ನಿನ್ನದೇ ಎನ್ನುವಂತೆ ಅಣಕಿಸುತ್ತೆ. ಬಚ್ಚಿಟ್ಟ ಭಾವನೆಗಳಿಗೆ ಚಿತ್ತಾರದ ಬಯಲನ್ನು ನೀಡಿ ವ್ಯ್ಯಾಪಿಸಿಕೊಳ್ಳಲು ಅನುವು ಮಾಡುತ್ತೆ. ಎಷ್ಟೋ ಬಾರಿ ದೂರವಾಣಿ ಜೀವ ಬಂದು ಮಾತನಾಡುತ್ತೆ ಅನ್ನಿಸುವಷ್ಟು ಅವ್ಯಕ್ತವಾಗುತ್ತೆ. ತೀರದ ಬಯಕೆಗಳು, ಮಾಸದ ನೆನಪುಗಳು, ದೂರಾದ ಭೇಟಿ, ಅನಿವಾರ್ಯತೆಯ ಅಂತರ....ಇವುಗಳನ್ನೆಲ್ಲವನ್ನು ಒಂದೇ ಕತ್ತರಿಯಡಿಯಲ್ಲಿ ಜೋಡಿಸಿ, ಇಗೋ ಮರೆಯದಿರು ಎನ್ನುವಂತೆ ಆಗಾಗ ಚೀರಾಟ ಮಾಡೋದನ್ನು ಕಂಡಾಗ ಓಡಿ ಹಿಡಿಯಬೇಕೆನಿಸುತ್ತೆ. ಕೈಯಲ್ಲಿ ಹಿಡಿ ನೆನಪನ್ನು ಹಿಡಿದಷ್ಟು ಅನುಭವ!!.

ಬದುಕಿನ ಬದಲಾವಣಿಗಳೇ ಹೀಗೆ. ಹತ್ತಿರವಿದ್ದಾಗ ಮಾತ್ರ ನೈಜತೆ. ಮತ್ತೆಲ್ಲವೂ ಅವ್ಯಕ್ತ. ಭಾವನೆಗಳನ್ನು, ಸಂಬಂಧಗಳನ್ನು ಯಕಶ್ಚಿತ್ ಒಂದು ಯಂತ್ರ ಹಿಡಿದಿಡುವ ರೀತಿ ಇದೆಯಲ್ವಾ, ಅದು ಎಲ್ಲರನ್ನು ಯಾವುದೋ ಪ್ರಶ್ನೆಯಡಿಯಲ್ಲಿ ನೂಕಿಬಿಡುತ್ತೆ. ಯಾವುದೋ ಒಂದೆಡೆ ಪುಸ್ತಕಗಳ ನಡುವೆ ಕುಳಿತಿದ್ದಾಗ, ಕೂಗಿ ಸಂಬಂಧಿಕರನ್ನು ಪರಿಚಯ ಮಾಡಿಕೊಡುವ ದೂರವಾಣಿಯನ್ನು ಕಂಡಾಗ ಯಾವುದೋ ಕಾಲದ ಸ್ನೇಹಿತ ಅನ್ನಿಸಿಬಿಡುತ್ತೆ. ಅನಿವಾರ್ಯತೆಯ ಸಂದರ್ಭದಲ್ಲಿ ಮನುಷ್ಯ ಅವಲಂಬನೆಯಾಗುವ ರೀತಿ ಒಂತರಾ ವಿಶೇಷ. ಅವಸರದ ಬದುಕಿನಲ್ಲಿ ಎಲ್ಲ ಸಂಬಂಧಗಳ ಬಗೆಗಿನ ವಿಚಾರಗಳನ್ನು ಮುಖಾಮುಖಿಯಾಗಿ ಚರ್ಚಿಸುವುದು ಕಷ್ಟಸಾದ್ಯ. ಆಗ ಸಂಬಂಧಗಳ ಕೊಂಡಿಯನ್ನು ಬೆಸೆಯುವಂತದ್ದು ಈ ಸ್ನೇಹಿತ. ಕೆಲವೊಮ್ಮೆ ನೆನಪುಗಳು ನಿರೀಕ್ಷೆಗಳಾಗಿ ಕಾಡುತ್ತಿರುವಾಗ, ಅವಸರದ ವಿಷಯದ ವಿಲೇವಾರಿಗೆ ಕಾಯುತ್ತಿದ್ದಾಗ, ಪ್ರೀತಿ ಹೆಪ್ಪುಗಟ್ಟಿ ಕಾದು ಕುಳಿತಿದ್ದಾಗ, ಸ್ನೇಹ ಸಾಕ್ಷಿಯಾಗಿ ಶುಭಾಶಯ ಮನದ ಮೂಲೆಯಲ್ಲಿ ಸರಿಯಲು ಅಣಿಯಾಗುತ್ತಿದ್ದಾಗ, ಯಾವುದೋ ಅಚಾನಕ್ ಸುದ್ದಿ ಆಶ್ಚರ್ಯಕ್ಕಾಗಿ ಕಾಯುತ್ತಿದ್ದಾಗ....ಮೊಳಗುವ ಆ ದ್ವನಿ ಎಷ್ಟೋ ಹ್ರದಯಗಳ ಬಡಿತವನ್ನು ಕಡಿಮೆ ಮಾಡಿಸುತ್ತೆ. ಕೆಲವೊಮ್ಮೆ ಹೆಚ್ಚಿಸಿ ಬಿಡುತ್ತೆ. ವ್ಯವಹಾರವನ್ನು ಸಲೀಸಾಗಿಸುತ್ತೆ. ಬಹುಶ: ಅವಸರದ ಬದುಕಿನ ಮನುಷ್ಯನ ಬಹುದೊಡ್ಡ ಒಡನಾಡಿ ಈ ದೂರವಾಣಿ!

ಕೆಲವೊಮ್ಮೆ ದೂರವಾಣಿ ಮುನಿಸಿಕೊಂಡ, ಅನಿವಾರ್ಯತೆಯ ಸುದ್ದಿ ತಿಳಿಯದೆ ಒದ್ದಾಡುವ ರೀತಿ ಇದೆಯಲ್ವಾ...ಆಗ ದೂರವಾಣಿಯ ರಿಂಗಣ ತುಂಬಾ ಹತ್ತಿರವಾದದ್ದು, ವ್ಯಾಪಕವಾದದ್ದು ಅನ್ನಿಸುತ್ತೆ. ಎಷ್ಟೋ ದೂರದ ಭಾವನೆಗಳನ್ನು, ಘಟನೆಗಳನ್ನು ಕುಳಿತಲ್ಲಿಗೆ ಕರೆದು ಹೇಳುವ Sincearity ಇದರದ್ದು. ಇದು best friend ಎಂಬ ಮನವರಿಕೆಯಿಂದಲೋ ಏನೋ...mobile phone ಅರಂಭವಾದದ್ದು!. ಈಗ ಈ ದನಿ ನಮ್ಮ ಬದುಕಿನ ಅಂಗವಾಗಿ ಬಿಟ್ಟಿದೆ. ಆದರೊಂದು ಜಿಜ್ನಾಸೆ.......ದೂರವಾಣಿ ಇರುವ ಮೊದಲು ಸಂಬಂಧಗಳು ಗಟ್ಟಿಯಾಗಿ ಇರಲಿಲ್ವಾ?..ಉತ್ತರ ಸುಲಭ. ಆಗ ಪ್ರಪಂಚ ನಮ್ಮ ಮನೆ, ನಮ್ಮ ಗ್ರಾಮ...ಅಷ್ಟಕ್ಕೆ ಸೀಮಿತವಾಗಿತ್ತು. ಆದರೀಗ ಅಣ್ಣ ಅಮೇರಿಕದಲ್ಲಿದ್ದರೆ, ತಮ್ಮ ಕುಂದಾಪುರದಲ್ಲಿ... ಅಗತ್ಯದ ವಿಷಯವನ್ನು ತಿಳಿಸಲು ಅಂಚೆಯನ್ನೇ ಅವಲಂಬಿಸುವುದಾದರೆ ಹಲವಾರು ದಿನ ಕಳೆದೀತು. ಆದರಿಂದು ಈ ಬಗೆಯ ಸಂದರ್ಭದಲ್ಲಿ ಆಪತ್ಕಾಲದ ಬಂಧುವಾಗಿ, ಭಾವನಾತ್ಮಕ ಕೊಂಡಿಯಾಗಿ, ವ್ಯವಹಾರಿಕ ಏಜೆಂಟ್ ಆಗಿ ದೂರವಾಣಿ ಕೆಲಸ ಮಾಡುತ್ತೆ. ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಇನ್ನೊಂದಕ್ಕೆ ಹೊಂದಿಕೊಳ್ಳೋದು, ಅವಲಂಬಿಸೋದು ಸ್ವಾಭಾವಿಕ ಅನ್ನಿಸುತ್ತೆ. ಸಂಘ ಜೀವಿ ಎನಿಸಿಕೊಂಡದ್ದು ಮನುಷ್ಯ ಸ್ವಾರ್ಥಕ್ಕಾಗಿ....!. ಅಲ್ಲೂ ಲಾಭವಿದೆ. ಇಲ್ಲದಿದ್ದಲ್ಲಿ ನಾವು ಕುರಿ, ಕತ್ತೆ, ಕೋಳಿಗಳಾಗಿ ಬದುಕುತ್ತಿದ್ದೆವೋ ಏನೋ.....ಆಗ ದೂರವಾಣಿಯ ರಿಂಗಣ ಪ್ರಾಂಗಣವನ್ನು ಮುಟ್ಟುತ್ತಿರಲಿಲ್ಲ, ಮನದ ಅಂಗಣವನ್ನು ತಟ್ಟುತ್ತಿರಲಿಲ್ಲ....ಅಲ್ವಾ?

ನಿಮ್ಮ
ದಿನು